ಜಿಲ್ಲಾ ಪೊಲೀಸ್ ಕಛೇರಿ,
ಕೋಲಾರ ಚಿನ್ನದ ಗಣಿ ಪ್ರದೇಶ.
ದಿನಾಂಕ: 20.11.2015.
ಪ ತ್ರಿ ಕಾ ಪ್ರ ಕ ಟ ಣೆ
ಕಾಮಸಮುದ್ರಂ ಪೊಲೀಸ್ ಠಾಣೆ ಪರಿವೀಕ್ಷಣೆ : ಐಜಿಪಿ ಅರುಣ್ ಚಕ್ರವರ್ತಿ
ಕೆಜಿಎಫ್ ಪೊಲೀಸ್ ಜಿಲ್ಲೆಯ ಕಾಮಸಮುದ್ರಂ ಪೊಲೀಸ್ ಠಾಣೆಯ ಪರಿವೀಕ್ಷಣೆಯನ್ನು ಕೇಂದ್ರ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಶ್ರೀ. ಜೆ.ಅರುಣ್ ಚಕ್ರವರ್ತಿ ಅವರು ನಡೆಸಿ, ಉತ್ತಮ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಗುರುವಾರದಂದು ಕಾಮಸಮುದ್ರಂ ಪೊಲೀಸ್ ಠಾಣೆಯ ಪರಿವೀಕ್ಷಣೆಗಾಗಿ ಆಗಮಿಸಿ, ಪರಿವೀಕ್ಷಣೆಯ ಸಂದರ್ಭದಲ್ಲಿ ಜನಸಂಪರ್ಕ ಸಭೆಯನ್ನು ಸಹ ನಡೆಸಿ ಗ್ರಾಮೀಣ ಜನತೆಯ ಕುಂದುಕೊರತೆಗಳನ್ನು ಖುದ್ದು ವಿಚಾರಿಸಿದರು.
ನಂತರ ಸಭೆಯನ್ನುದ್ದೇಶಿಸಿ ಐ.ಜಿ.ಪಿ. ಶ್ರೀ. ಅರುಣ್ ಚಕ್ರವರ್ತಿ ಅವರು ಮಾತನಾಡುತ್ತಾ, ಪೊಲೀಸರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಗ್ರಾಮೀಣ ಜನತೆಯ ಸಮಸ್ಯೆಗಳ ಕುರಿತು ಆಗಿಂದಾಗ್ಗೆ ಸಂಬಂಧಪಟ್ಟ ಇಲಾಖೆಗೆ ವರದಿ ಕಳುಹಿಸಿಕೊಡಲು ಕ್ರಮ ಕೈಗೊಂಡು ಸ್ಪಂಧಿಸಬೇಕೆಂದು ಕರೆ ನೀಡಿದರು. ಜನಸಾಮಾನ್ಯರ ಸಮಸ್ಯೆ, ದೂರುಗಳಿಗೆ ಸ್ಪಂಧಿಸದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ದ ದೂರು ನೀಡಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಐ.ಜಿ.ಪಿ. ಶ್ರೀ. ಜೆ.ಅರುಣ್ ಚಕ್ರವರ್ತಿ ಅವರು ತಿಳಿಸಿದರು.
ಪೊಲೀಸ್ ಇಲಾಖೆಯ ವತಿಯಿಂದ ಕೇಂದ್ರ ವಲಯದಲ್ಲಿ ಮೊಟ್ಟಮೊದಲ ಬಾರಿಗೆ ಐ.ಜಿ.ಪಿ. ಶ್ರೀ. ಜೆ.ಅರುಣ್ ಚಕ್ರವರ್ತಿ ಅವರು ಹೊಸದಾಗಿ ಜಾರಿಗೆ ತಂದಿರುವ ನ್ಯೂ ಬೀಟ್ ಸಿಸ್ಟಮ್ನ ಪ್ರಗತಿ ಪರಿಶೀಲನೆಯನ್ನು ನಡೆಸಿದ ಅವರು ಕಾಮಸಮುದ್ರಂ ಪೊಲೀಸ್ ಠಾಣೆಯ ಸರಹದ್ದಿನಲ್ಲಿರುವ 15 ಗ್ರಾಮ ಬೀಟುಗಳ ಕಾರ್ಯವೈಖರಿಯನ್ನು ಮೆಚ್ಚಿದರು. ಎಲ್ಲಾ ಗ್ರಾಮಗಳಲ್ಲೂ ಬೀಟು ಪುಸ್ತಕವನ್ನು ಕಡ್ಡಾಯವಾಗಿ ಇಡುವಂತೆ, ಪ್ರತಿ ವಾರಕ್ಕೆರಡು ದಿನ ಪೊಲೀಸರು ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮೀಣ ಜನತೆಯ ಸಮಸ್ಯೆಗಳಿಗೆ ಸ್ಪಂಧಿಸಬೇಕೆಂದು ಸೂಚಿಸಿದರು.
ಕಾಮಸಮುದ್ರಂ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಪ್ರಪ್ರಥಮ ಬಾರಿಗೆ ಭೇಟಿ ನೀಡಿದ ಐಜಿಪಿ ಶ್ರೀ. ಜೆ.ಅರುಣ್ ಚಕ್ರವರ್ತಿ ಅವರಿಗೆ ಕಾಮಸಮುದ್ರಂ ಪಿಎಸ್ಐ ವಸಂತ್ ನೇತೃತ್ವದಲ್ಲಿ ಗೌರವ ರಕ್ಷೆ ನೀಡಲಾಯಿತು. ನಂತರ ಐಜಿಪಿ ಶ್ರೀ..ಅರುಣ್ ಚಕ್ರವರ್ತಿ ಅವರು ಕಾಮುಸಮುದ್ರಂ ಸರಹದ್ದಿನ ಹಲವು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಮಾಲೋಚಿಸಿ, ನ್ಯೂ ಬೀಟ್ ಸಿಸ್ಟಮ್ ಕಾರ್ಯವೈಖರಿಯ ಕುರಿತು ಖುದ್ದು ಪರಿಶೀಲನೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ. ಹೆಚ್.ಆರ್.ಭಗವಾನ್ದಾಸ್ ಅವರು ಉಪಸ್ಥಿತರಿದ್ದು, ಪರಿವೀಕ್ಷಣೆಯ ವೇಳೆಯಲ್ಲಿ ಐಜಿಪಿ ರವರಿಗೆ ಅಗತ್ಯ ಮಾಹಿತಿಯನ್ನು ಒದಗಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಶ್ರೀ. ಪುಟ್ಟಮಾದಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀ. ಜಿ.ಎನ್. ವೆಂಕಟಾಚಲಪತಿ, ಪಿ.ಎಸ್.ಐ. ಶ್ರೀ. ವಸಂತ್ ಇತರರು ಹಾಜರಿದ್ದರು.